ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ
ಬಜಪೆ: ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ
‘ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಆಗತ್ಯ’
ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಕ್ಕೆ ಅಟಲ್ ಟಿಂಕರಿಂಗ್ ಲ್ಯಾಬ್ ಆರಂಭಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಅನ್ವೇಷಣೆ ಮನೋಭಾವ ಬೆಳೆಯಲಿದ್ದು ವಿಜ್ಞಾನಿಗಳ ಸೃಷ್ಟಿಗೆ ಸಾಧ್ಯವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಭಾರತ ಸರಕಾರದ ನೀತಿ ಆಯೋಗದ ಅನುದಾನ 10 ಲಕ್ಷ ರೂ ಹಾಗೂ ಎಂಆರ್ಪಿಎಲ್ನ 21 ಲಕ್ಷ ರೂ. ವೆಚ್ಚದ ಸಹಕಾರದೊಂದಿಗೆ ಅಟಲ್ ಟಿಂಕರಿಂಗ್ ಲ್ಯಾಬ್ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊರ್ವ ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ಪ್ರತಿಭೆ ಇರುತ್ತದೆ . ಇದಕ್ಕೆ ಪೂರಕವಾದ ಮಾರ್ಗದರ್ಶನ ನೀಡುವ ಅಗತ್ಯವಿದೆ. ಪ್ರತಿಭೆಗಳು ಅರಳಿ ದೇಶಕ್ಕೆ ಹಲವಾರು ವಿಜ್ಞಾನಿಗಳನ್ನು ಈ ಲ್ಯಾಬ್ನಿಂದ ನೀಡಲಿ ಎಂದು ಆಶಿಸಿದರು. ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆಯವರಲ್ಲಿ ಚರ್ಚಿಸಿ, ಅದರ ಸಮಸ್ಯೆಗಳ ಪರಿಹಾರದ ಬಗ್ಗೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು. ಮಂಗಳೂರಿನ ಬೆಥನಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ವಂ| ಭ| ರೋಸ್ ಸೆಲಿನ್ ಅವರು ಅಧ್ಯಕ್ಷತೆ ವಹಿಸಿದ್ದರು. ಬಜಪೆ ಸೈಂಟ್ ಜೋಸೆಫ್ ಚರ್ಚ್ನ ಧರ್ಮಗುರು ವಂ| ರೊನಾಲ್ಡ್ ಕುಟಿನ್ಹೊ ಆಶೀರ್ವಚನ ನೀಡಿದರು.
ಈ ಸಂದರ್ಭ ಎಂಆರ್ಪಿಎಲ್ ಸಂಸ್ಥೆ ಜನರಲ್ ಮ್ಯಾನೇಜರ್ ಪ್ರಸಾದ್ ಎ, ಗುತ್ತಿಗೆದಾರ ರೋಶನ್, ಉದ್ಯಮಿ ದಾನಿ ಶ್ಯಾರೆಲ್ ಪ್ರಕಾಶ್ ಸಿಂಪ್ಸನ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಜಿ.ಪಂ ಸದಸ್ಯೆ ವಸಂತಿ ಕಿಶೋರ್, ತಾ.ಪಂ ಸದಸ್ಯೆ ಉಷಾ ಸುವರ್ಣ, ಬೆಥನಿ ವಿದ್ಯಾ ಸಂಸ್ಥೆ ಮಂಗಳೂರು ಪ್ರಾಂತ್ಯಾಧಿಕಾರಿಣಿ ವಂ| ಭಗಿನಿ ಸಿಸಿಲಿಯಾ ಮೆಂಡೋನ್ಸಾ, ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಕೆ.ವಿ ರಾವ್, ಬಜಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರಿಯಾ ಮೊಂತೆರೊ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲಾ ಸಂಚಾಲಕಿ ವಂ| ಭಗಿನಿ ಮಾರಿಲೀಟಾ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಂ| ಭ ಸಿಂತಿಯಾ ಡಿಕುನ್ಹಾ ಸ್ವಾಗತಿಸಿದರು. ಗಣಿತ-ವಿಜ್ಞಾನ ಶಿಕ್ಷಕ ವಾಸುದೇವ ರಾವ್ ಕುಡುಪು ಅವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲಿಲ್ಲಿ ಮಿನೇಜಸ್ ವಂದಿಸಿದರು. ಜಿಲ್ಲೆಯ 24 ಅಟಲ್ ಟಿಂಕರಿಂಗ್ ಲ್ಯಾಬ್ನ ತಲಾ 10 ವಿದ್ಯಾರ್ಥಿಯಂತೆ ವಿದ್ಯಾರ್ಥಿ -ವಿಜ್ಞಾನಿ ಸಂವಾದ ಕಾರ್ಯಕ್ರಮದಲ್ಲಿ ಹಾಗೂ ಪರಿಸರದ 21 ಶಾಲೆಗಳ ತಲಾ 5 ವಿದ್ಯಾರ್ಥಿಗಳಂತೆ ವಿಜ್ಞಾನ ಮಾದರಿಯೊಂದಿಗೆ ಒಟ್ಟು 600 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments powered by CComment